ತಮಸೋಮಾ ಜ್ಯೋತಿರ್ಗಮಯ – 3

ಬೆಳ್ಳಿಯ ದೀಪ

ಲೋಹಗಳ ದೀಪಗಳಲ್ಲಿ ಶ್ರೇಷ್ಟವಾದುದು ಬೆಳ್ಳಿಯ ದೀಪವಂತೆ…ಸಾಂಕೇತಿಕವಾಗಿ ಬೆಳ್ಳಿಯು ಚಂದ್ರನ ಕಾರಕ ಲೋಹವಾಗಿದ್ದರು ವೈದಿಕವಾಗಿ ಬೆಳ್ಳಿ ಗುರು ಗ್ರಹದ ಲೋಹ. ಮೊದಲೆಲ್ಲಾ ಶುಭ ಸಮಾರಂಭಗಳಲ್ಲಿ ಬೆಳ್ಳಿಯ ದೀಪ ಕೊಡುವ ಸಂಪ್ರದಾಯ ಇದೇ ಕಾರಣದಿಂದ ಪ್ರಾರಂಭವಾಗಿರಬಹುದು ಅನ್ನೋದು ಲೇಖಕರ ಅಭಿಪ್ರಾಯ…ಲೇಖಕರು ಬೆಳ್ಳಿ ದೀಪದ ಮಹತ್ವವನ್ನು ಈ ರೀತಿ ಪಟ್ಟಿ ಮಾಡಿದ್ದಾರೆ

* ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ ಬೆಳ್ಳಿಯ ದೀಪವನ್ನು ಯಾರ ಮನೆಯಲ್ಲಿ ಬೆಳಗಲಾಗುತ್ತದೋ , ಆದನ್ನು ಹಚ್ಚಿದವರಿಗೆ ಮಾತ್ರವಲ್ಲದೇ ಆ ಮನೆಯವರಿಗೆ ಅಷ್ಟೈಶ್ವರ್ಯ ಪ್ರಾಪ್ತವಾಗುತ್ತದೆ.

* ಬೆಳ್ಳಿ ದೀಪವನ್ನು ವೇದ ಮಾತೆ ಗಾಯತ್ರಿ ದೇವಿ, ಮಹಿಷಾಸುರ ಮರ್ದಿನಿ, ಶ್ರೀ ಚಾಮುಂಡೇಶ್ವರಿ, ಶ್ರೀ ಚಕ್ರಸ್ಥಿತ ಚಕ್ರೇಶ್ವರಿ, ಶ್ರೀ ಲಲಿತಾ ತ್ರಿಪುರ ಸುಂದರಿ, ರಾಜರಾಜೇಶ್ವರಿ, ಶ್ರೀ ಲಕ್ಷ್ಮೀಸಹಿತ ನಾರಾಯಣ ಸಾಲಿಗ್ರಾಮ, ಬಲಮುರಿ ಶಂಖ, ಬಲಮುರಿ ಗಣಪನ ಎದುರು ಬೆಳಗಿದಲ್ಲಿ ಅವರ ಇಷ್ಟಾರ್ಥಗಳು ಅತಿ ಶೀಘ್ರದಲ್ಲಿ ಈಡೇರುವುದು.

* ತುಪ್ಪವನ್ನು ಬಳಸಿ , ಬಿಳಿ ಎಕ್ಕದ ಗಿಡದ ನಾರಿನಿಂದ ಅಥವಾ ತಾವರೆ ಹೂವಿನ ಕಾಂಡದ ನಾರಿನಿಂದ ಬತ್ತಿಯನ್ನು ಮಾಡಿ ಬೆಳ್ಳಿ ದೀಪವನ್ನು ಶುಕ್ರವಾರದ ಸಂಜೆ ಬೆಳಗಿದಲ್ಲಿ ಅವರ ದಾರಿದ್ರ್ಯ ನಿವಾರಣೆ ಹಾಗೂ ಸಾಲಭಾಧೆ ನಿವಾರಣೆಯಾಗುತ್ತದೆ.

* ಹುಣ್ಣಿಮೆ, ಅಮವಾಸ್ಯೆ ಅಥವಾ ಹಬ್ಬಗಳಂತಹಾ ಶುಭದಿನಗಳಲ್ಲಿ ತುಪ್ಪವನ್ನು ಬಳಸಿ, ಬೆಳ್ಳಿಯ ದೀಪವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಚ್ಚುವುದರಿಂದ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ.

* ಬೆಳ್ಳಿಯ ದೀಪವನ್ನು ತುಪ್ಪ ಬಳಸಿ ಬೆಳಗಿಸಿ ಗಣಪತಿ ದೇವರಿಗೆ 21 ದಿನಗಳ ಕಾಲ ನಿರಂತರವಾಗಿ ಹಚ್ಚಿದರೆ ಆರೋಗ್ಯ ವೃದ್ಧಿ, ಉದ್ಯೋಗ ಪ್ರಾಪ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

* ಶ್ರೀ ಮಹಾಲಕ್ಷ್ಮೀ ಅಥವಾ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಒಟ್ಟು 51 ವಾರಗಳವರೆಗೆ ಹಚ್ಚಿದರೆ ಅವಿವಾಹಿತರಿಗೆ ಕಂಕಣಭಾಗ್ಯ, ಹಣಕಾಸಿನಲ್ಲಿ ಅಭಿವೃದ್ಧಿ ಉಂಟಾಗುತ್ತದೆ.

* ಯಾರು ಹಣಕಾಸಿನ ತೊಂದರೆ, ಸಾಲಭಾಧೆಯಿಂದ ಬಳಲುತ್ತಿರುವರೋ ಅವರು ಮಹಾಲಕ್ಷ್ಮಿಯ ಮುಂದೆ ಬೆಳ್ಳಿ ದೀಪದಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಳಿ ಎಕ್ಕದ ಗಿಡದ ಹತ್ತಿಯಿಂದ ಬತ್ತಿ ತಯಾರಿಸಿ, ನಾಲ್ಕು ಎಳೆಯ ಒಂದು ಬತ್ತಿಯನ್ನು ಮಾಡಿ ಹಚ್ಚುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

* ಶ್ರೀ ರಾಘವೇಂದ್ರ ಸ್ವಾಮಿ ಅಥವಾ ಶ್ರೀ ಸಾಯಿಬಾಬಾರ ಮುಂದೆ ಗುರುವಾರಗಳಂದು ಬೆಳ್ಳಿಯ ದೀಪದಲ್ಲಿ ತುಪ್ಪವನ್ನು ಹಾಕಿ ಹಚ್ಚುವುದರಿಂದ ಯಾವುದೇ ರೀತಿಯ ಮಾಟ ಮಂತ್ರಗಳ ಸಮಸ್ಯೆಯಿಂದ ಪಾರಾಗಬಹುದು ಮತ್ತು ಸಂತಾನ ಪ್ರಾಪ್ತಿಗಿದ್ದ ತೊಂದರೆಗಳು ದೂರವಾಗುವುವು.

ಈ ಬೆಳ್ಳಿಯ ದೀಪಕ್ಕೂ ಮನುಷ್ಯನ ಮೇಲೆ ಪ್ರಭಾವ ಬೀರೋ ನವಗ್ರಹಗಳಿಗೂ ಸಂಭಂಧವಿದೆ. ಅವುಗಳ ಬಗ್ಗೆ ಇನ್ನೊಮ್ಮೆ ನೋಡೋಣ…
ಮೇಲೆ ಹೇಳಿದ ಎಲ್ಲಾ ವಿಷಯಗಳು ಪುಸ್ತಕದಲ್ಲಿದ್ದುದನ್ನೆ ನಿಮ್ಮ ಮುಂದಿಟ್ಟದ್ದು… ಹಾಗಾಗಿ ಇದು ನಿಜವಾ …ಅನ್ನೊರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ … ನಂಬಿಕೆ ಉಳ್ಳವರು ಓದಿದರೆ ಸಾಕು…ಇದರ ಫಲಪ್ರಾಪ್ತಿಗಳೆಲ್ಲವೂ ನಿಮ್ಮ ಶ್ರದ್ಧಾ ಭಕ್ತಿಗಳನ್ನೂ ಕೂಡ ಅವಲಂಬಿಸಿರುತ್ತದೆ ಅನ್ನೋದು ನನ್ನ ಅನಿಸಿಕೆ…

—ಕೆ.ಗುರುಪ್ರಸಾದ್

ಗ್ರಂಥ ಕೃಪೆ: ದೀಪ ಸಂಪುಟ
ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ನಿಮ್ಮ ಅನಿಸಿಕೆ